ಚಿಕ್ಕಮಗಳೂರಿನಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ: ರೋಗಿ ಮತ್ತು ಆತನ ಸೋದರಿ ಬಂಧನ ಘಟನೆ ಸಂಬಂಧ ಚಿಕ್ಕಮಗಳೂರಿನ ಇರ್ಫಾನ್ ಮತ್ತು ತಸ್ಲೀಂ ಎಂದು ಗುರುತಿಸಲಾಗಿರುವ ರೋಗಿಯನ್ನು ಮತ್ತು ಆತನ ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಂಗಳೂರು: ಇಲ್ಲಿನ ಮಲ್ಲೇಗೌಡ ಜನರಲ್ ಆಸ್ಪತ್ರೆ ಆವರಣದಲ್ಲಿ ನಿನ್ನೆ ಮಂಗಳವಾರ ಬೆಳಗ್ಗೆ ಕರ್ತವ್ಯನಿರತ ವೈದ್ಯರ ಮೇಲೆ ರೋಗಿಯೊಬ್ಬರ ಸಹೋದರಿ ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.ಘಟನೆ ಸಂಬಂಧ ಚಿಕ್ಕಮಗಳೂರಿನ ಇರ್ಫಾನ್ ಮತ್ತು ತಸ್ಲೀಂ ಎಂದು ಗುರುತಿಸಲಾಗಿರುವ ರೋಗಿಯನ್ನು ಮತ್ತು ಆತನ ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 18ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಘರ್ಷಣೆಯಲ್ಲಿ ಗಾಯಗೊಂಡಿದ್ದ ಇರ್ಫಾನ್ ನನ್ನು ಅವರ ಕುಟುಂಬ ಸದಸ್ಯರು ನಿನ್ನೆ ಬೆಳಗ್ಗೆ 10.45 ರ ಸುಮಾರಿಗೆ ಆಸ್ಪತ್ರೆಗೆ ಕರೆತಂದರು. ನಂತರ ಮೂಳೆ ಶಸ್ತ್ರಚಿಕಿತ್ಸಕ ಬಿ.ಎಸ್.ವೆಂಕಟೇಶ್ ಅವರನ್ನು ತಪಾಸಣೆಗಾಗಿ ಕ್ಯಾಶುವಾಲಿಟಿ ವಾರ್ಡ್‌ಗೆ ಕರೆದೊಯ್ದರು.ಅಷ್ಟರಲ್ಲಿ ಇರ್ಫಾನ್‌ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ವಾರ್ಡ್‌ಗೆ ಪ್ರವೇಶಿಸಿ ಡಾಕ್ಟರ್ ವೆಂಕಟೇಶ್ ಮನವಿ ಮಾಡಿಕೊಂಡರೂ ಹೊರಗೆ ಹೋಗಲು ನಿರಾಕರಿಸಿದರು. ವೆಂಕಟೇಶ್ ಮತ್ತು ಇರ್ಫಾನ್ ಕುಟುಂಬ ಸದಸ್ಯರ ನಡುವೆ ವಾಗ್ವಾದ ನಡೆದಿದ್ದು, ತಸ್ಲೀಮ್ ತನ್ನ ಪಾದರಕ್ಷೆಯನ್ನು ವೈದ್ಯರತ್ತ ಎಸೆದಿದ್ದಳು. ಅರೆ ವೈದ್ಯಕೀಯ ಸಿಬ್ಬಂದಿ ಆಕೆಯನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ, ತಸ್ಲೀಮ್ ಹೆಚ್ಚು ಉದ್ರೇಕಗೊಂಡಿದ್ದಳು. ತನಗೆ ಅವಮಾನ ಮಾಡಿದ್ದಾರೆ ಎಂದು ವೈದ್ಯರ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾಳೆ.ವೈದ್ಯರು ಒಪಿಡಿ ಬಂದ್ ಮಾಡಿ ಪ್ರತಿಭಟನೆ: ಘಟನೆಯ ನಂತರ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಮತ್ತು ಇತರ ಸಿಬ್ಬಂದಿ ಮುಷ್ಕರ ನಡೆಸಿದ್ದಾರೆ. ಡಾ.ವೆಂಕಟೇಶ್ ಮೇಲಿನ ಹಲ್ಲೆ ಖಂಡಿಸಿ ಹೊರರೋಗಿ ವಿಭಾಗ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಮೋಹನ್‌ಕುಮಾರ್ ನೇತೃತ್ವದಲ್ಲಿ ಮೆರವಣಿಗೆ ಮೂಲಕ ನಗರ ಠಾಣೆಗೆ ತೆರಳಿ ದೂರು ಸಲ್ಲಿಸಿದರು. ದೂರಿನ ಆಧಾರದ ಮೇಲೆ ಪೊಲೀಸರು ಇರ್ಫಾನ್ ಮತ್ತು ತಸ್ಲೀಂನನ್ನು ಬಂಧಿಸಿದ್ದಾರೆ.ಇದೇ ವೇಳೆ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಅವರು ಗೃಹ ಸಚಿವ ಜಿ.ಪರಮೇಶ್ವರ ಹಾಗೂ ಪೊಲೀಸ್ ಇಲಾಖೆಗೆ ವೈದ್ಯರು ಹಾಗೂ ಇತರ ಸಿಬ್ಬಂದಿಗೆ ಭದ್ರತೆ ಒದಗಿಸುವಂತೆ ಎಕ್ಸ್‌ಪೋಸ್ಟ್‌ನಲ್ಲಿ ಒತ್ತಾಯಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿ, ಡಾಕ್ಟರ್ ವೆಂಕಟೇಶ್ ಅವರ ಮೇಲೆ ಹಲ್ಲೆಯಾದ ಅಮಾನವೀಯ ಘಟನೆ ನಡೆದಿದೆ. ಸನ್ಮಾನ್ಯ ಗೃಹ ಸಚಿವರಾದ @ ಇಂತಹ ನೀಚ ಕೃತ್ಯ ಎಸಗಿದವರನ್ನು ಈ ಕೂಡಲೇ ಬಂಧಿಸಿ ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಿ. @ ಅಲೋಕ್ ಮೋಹನ್ ಅವರೇ ತಾವು ಈ… ../O1vv77L6wR